ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್‌ ನಿರಾಣಿ

  "ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ಯಮಿಗಳು ಮುಂದೆ ಬರಬೇಕು ಎಂದು ಎಂಆರ್‌ಎನ್ ಸಮೂಹದ ವ್ಯವಸ್ಥಾಪಕ ನಿದೇರ್ಶಕ ವಿಜಯ್ ಎಂ ನಿರಾಣಿ ಅವರು ಕರೆ ನೀಡಿದ್ದಾರೆ.

Written by - Zee Kannada News Desk | Last Updated : Nov 3, 2022, 09:00 PM IST
  • "ಡೀಸೆಲ್‌ ಮತ್ತು ಪೆಟ್ರೋಲ್ ದರ ದಿನೇದಿನೇ ಹೆಚ್ಚುತ್ತಿದ್ದು, ಈ ತೈಲಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು.
  • ಅದಕ್ಕಿರುವ ಪರ್ಯಾಯ ಮಾರ್ಗ ಎಥನಾಲ್ ಬಳಕೆ.
  • ಪರಿಸರ ಸ್ನೇಹಿ ಎಥನಾಲ್‌ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗಟ್ಟಲು ಸಹಕಾರಿ,"
 ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್‌ ನಿರಾಣಿ title=

ಬೆಂಗಳೂರು:  "ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ಯಮಿಗಳು ಮುಂದೆ ಬರಬೇಕು ಎಂದು ಎಂಆರ್‌ಎನ್ ಸಮೂಹದ ವ್ಯವಸ್ಥಾಪಕ ನಿದೇರ್ಶಕ ವಿಜಯ್ ಎಂ ನಿರಾಣಿ ಅವರು ಕರೆ ನೀಡಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗುರುವಾರ ಇಂಧನ ಕ್ಷೇತ್ರ ಕುರಿತ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯ್‌ ನಿರಾಣಿ,  "ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ.  ಪವನ ಹಾಗೂ ಸೌರ ವಿದ್ಯುತ್‌ ಉತ್ಪಾದನೆ ಯೋಜನೆಯನ್ನು ಅಭಿವೃದ್ಧಿಪಡಿಸಿ, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಲು ಯೋಜಿಸಲಾಗಿದೆ," ಎಂದರು.

"ಡೀಸೆಲ್‌ ಮತ್ತು ಪೆಟ್ರೋಲ್  ದರ ದಿನೇದಿನೇ ಹೆಚ್ಚುತ್ತಿದ್ದು, ಈ ತೈಲಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು. ಅದಕ್ಕಿರುವ ಪರ್ಯಾಯ ಮಾರ್ಗ ಎಥನಾಲ್ ಬಳಕೆ.  ಪರಿಸರ ಸ್ನೇಹಿ ಎಥನಾಲ್‌ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗಟ್ಟಲು ಸಹಕಾರಿ," ಎಂದು ಅವರು ಹೇಳಿದರು.

ಇದನ್ನೂ ಓದಿ: ಗೊಂಡ ಕುರುಬ ಮತ್ತು ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮನವಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವಿಜಯ್ ನಿರಾಣಿ, "ರಾಜ್ಯದಲ್ಲಿ ಎಥೆನಾಲ್‌ನಂತಹ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸಾಕಷ್ಟು  ಅವಕಾಶವಿದೆ,"ಎಂದರು.

"ಕಬ್ಬಿನಿಂದ  ಸಕ್ಕರೆ  ಉತ್ಪಾದನೆ ಮಾತ್ರವಲ್ಲದೇ, ಎಥೆನಾಲ್ ಸೇರಿದಂತೆ ಕಬ್ಬಿನ ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಬಹುದು.  ಪೆಟ್ರೋಲ್‌, ಡೀಸೆಲ್‌ ಜತೆಗೆ  20 ಪ್ರತಿಶತ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸುವ ಪ್ರಧಾನಿ ಮೋದಿಯವರ ಆಶಯವನ್ನು ನಾವು ಈಗಾಗಲೇ ಸಾಧಿಸಿದ್ದೇವೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಸಾಮರ್ಥ್ಯವನ್ನು ಗಳಿಸಿದ್ದೇವೆ," ಎಂದು ವಿಜಯ್ ನಿರಾಣಿ ಹೇಳಿದರು.

"ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಎಂಆರ್‌ಎನ್‌ ಸಮೂಹ  ಕೆಲಸ ಮಾಡುತ್ತಿದೆ. ಕಬ್ಬಿನ ಉಪ ಉತ್ಪನ್ನಗಳ ಸಮಪರ್ಕ ಬಳಕೆ, ಕೃಷಿ ಆಧಾರಿತ ಉದ್ಯಮಕ್ಕೆ ಒತ್ತು ನೀಡಿದ್ದೇವೆ.  ಜತೆಗೆ,  ಡೀಸೆಲ್ ಇಂಜಿನ್‌ಗಳನ್ನು ಬಯೋ-ಸಿಎನ್‌ಜಿ ಇಂಜಿನ್‌ ಟ್ರ್ಯಾಕ್ಟರ್‌ಗಳಾಗಿ ಪರಿವರ್ತಿಸುವ ಮೂಲಕ ಅವರ ರೈತರ ಆರ್ಥಿಕ ಹೊರೆ ತಗ್ಗಿಸುವಲ್ಲಿ ನೆರವಾಗುತ್ತಿದ್ದೇವೆ," ಎಂದು ಅವರು  ಹೇಳಿದರು.

"ಜಾಗತಿಕವಾಗಿ ಬ್ರ್ಯಾಂಡ್ ಇಂಡಿಯಾಗೆ ಕರ್ನಾಟಕವು ಅತಿದೊಡ್ಡ ಕೊಡುಗೆಯನ್ನು ನೀಡಿದೆ. ವಿಶೇಷವಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು  ಜಾಗತಿಕ ಮಟ್ಟದಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ," ಎಂದು ವಿಜಯ್ ನಿರಾಣಿ ಹೇಳಿದರು.

"ಮುಂಬರುವ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತು ರಫ್ತು ಮಾಡುವಲ್ಲಿ ಭಾರತ ಮುಂಚೂಣಿಗೆ ಬರುವ ಕನಸು ನನಸು ಆಗುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ. ಮುಖ್ಯವಾಗಿ, ಎಲೆಕ್ಟ್ರಾನಿಕ್ಸ್ ವಸ್ತುಗಳ ಆಮದನ್ನು ತಗ್ಗಿಸುವುದು ನಮ್ಮ ಮುಂದಿನ ಗುರಿಯಾಗಬೇಕು," ಎಂದು ಅವರು ಹೇಳಿದರು.

ಇದನ್ನೂ ಓದಿ: "ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು"

"ಈ ಮೊದಲು ಜಾಗತಿಕ ಹೂಡಿಕೆದಾರರ ಸಮಾವೇಶದಿಂದ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆ ಇತ್ತು. ಈಗ  ನಮ್ಮ ನಿರೀಕ್ಷೆಗೂ ಮೀರಿ  ಮೊತ್ತ ದುಪ್ಪಟ್ಟಾಗುವ ಸಾಧ್ಯತೆ ಇದೆ. ಇದರಿಂದ ಕರ್ನಾಟಕ ‌ಉದ್ಯಮ ಸ್ನೇಹಿ ರಾಜ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಗ್ರಮಾನ್ಯ ಉದ್ಯಮಿಗಳನ್ನು ಒಂದೇ ವೇದಿಕೆಯಡಿ ಕರೆ ತರುವಲ್ಲಿ ಈ ಸಮಾವೇಶ ಯಶಸ್ವಿಯಾಗಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಾದದಲ್ಲಿ ಇಂಧನ  ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯ್ಕ್,  ಪೆಟ್ರೋನಸ್ ಹೈಡ್ರೋಜನ್ ಕಂಪನಿ ಸಿಇಓ ಅದ್ಲಾನ್ ಅಹ್ಮದ್,  ಹಿಟಾಚಿ ಎನರ್ಜಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವೇಣು ನುಗೂರಿ ಭಾಗವಹಿಸಿದ್ದರು.

Live TV

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News