Cauvery dispute: ಕಾವೇರಿ-ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‍ಗೆ ಹೊಸ ಸವಾಲು ಹಾಕಿದ ಬಿಜೆಪಿ

Cauvery Water Sharing Dispute: ಸಿಎಂ ಸಿದ್ದರಾಮಯ್ಯರವರು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ರವರು, ಇನ್ನು 15 ದಿನದೊಳಗೆ ತಮಿಳುನಾಡು ಸರ್ಕಾರದ ವತಿಯಿಂದ ಮೇಕೆದಾಟು ಯೋಜನೆಗೆ ನಿರಪೇಕ್ಷಣಾ ಅರ್ಜಿಯನ್ನು ಸಲ್ಲಿಸಲು ಸ್ಟಾಲಿನ್‌ ಅವರ ಮನವೊಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ.

Written by - Puttaraj K Alur | Last Updated : Sep 29, 2023, 06:17 PM IST
  • ಇನ್ನೆರಡು ವಾರದಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ
  • ಸಿದ್ದರಾಮಯ್ಯ & ಡಿಕೆಶಿಯವರು ಮೇಕೆದಾಟು ಯೋಜನೆಗೆ ನಿರಪೇಕ್ಷಣಾ ಅರ್ಜಿ ಸಲ್ಲಿಸಲು ಸ್ಟಾಲಿನ್‌ ಮನವೊಲಿಸಲಿ
  • ನಾಡಿಗೆ ಒಳಿತಾಗುವ ಈ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೆ ಖಂಡಿತವಾಗಿ ಬಿಜೆಪಿ ‌ಸಂಪೂರ್ಣ ಸಹಕಾರ ನೀಡಲಿದೆ
Cauvery dispute: ಕಾವೇರಿ-ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‍ಗೆ ಹೊಸ ಸವಾಲು ಹಾಕಿದ ಬಿಜೆಪಿ title=
ಕಾಂಗ್ರೆಸ್ ಗೆ ಬಿಜೆಯಿಂದ ಸವಾಲು!

ಬೆಂಗಳೂರು: ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಮತ್ತು ಅದರಲ್ಲಿ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುವುದು ಕಾಂಗ್ರೆಸ್ ಪಕ್ಷದ ಜನ್ಮತಃ ಗುಣವೆಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಈಗ ನಡೆಯುತ್ತಿರುವ ಕಾವೇರಿ ವಿಚಾರದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿಯತ್ತ ಗಮನ ಹರಿಸದೆ, ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಿ, ಆ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುವ ಸಣ್ಣತನದ ರಾಜಕೀಯವನ್ನು ಮಾಡುತ್ತಿದೆ’ ಎಂದು ಕುಟುಕಿದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸದೆ ಅನೇಕ ವಿಷಯಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ. ರಾಜ್ಯದಲ್ಲಿ 103 ವರ್ಷಗಳ ಬಳಿಕ ಅತ್ಯಂತ ಭೀಕರ ಬರ ಬಂದಿದ್ದು, ಕಾವೇರಿ ಕೊಳ್ಳದ 34 ತಾಲೂಕುಗಳಲ್ಲಿ 32 ತಾಲೂಕುಗಳು ಅತಿಹೆಚ್ಚು ಬರಪೀಡಿತವಾಗಿವೆ ಎಂಬುದನ್ನು ರಾಜ್ಯ ಸರ್ಕಾರವೇ ಹೇಳಿದೆ. ರಾಜ್ಯದಲ್ಲಿ ಈ ಬಾರಿ ಶೇ.60ಕ್ಕಿಂತಲೂ ಜಾಸ್ತಿ ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದಲ್ಲಿ ರಾಜ್ಯದ ಬೇಡಿಕೆ ಪ್ರಮಾಣ ಒಟ್ಟು 106 ಟಿಎಂಸಿ. ಆದರೆ ಈ ಬಾರಿ ಶೇಖರಣೆಯಾಗಿರುವುದು ಕೇವಲ 50 ಟಿಎಂಸಿ ನೀರು ಮಾತ್ರ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

‘ರಾಜ್ಯ ಪ್ರತಿ ಬಾರಿ ಅತಿಹೆಚ್ಚು ನಂಬಿಕೊಳ್ಳುವುದು ಮುಂಗಾರು ಮಳೆಯನ್ನು. ಈ ಬಾರಿ ಮುಂಗಾರು ಮಳೆ ವಿಫಲವಾಗಿದ್ದಲ್ಲದೇ, ಪ್ರಸ್ತುತ ಮುಂಗಾರು ಮಳೆಯ ಅವಧಿ ಸಹ ಬಹುತೇಕ ಮುಗಿದಿದೆ. ಆದರೆ ತಮಿಳುನಾಡು ಹೆಚ್ಚು ನಂಬಿಕೊಂಡಿರುವುದು ಹಿಂಗಾರು ಮಳೆಯನ್ನು. ಅಕ್ಟೋಬರ್ 8ರಿಂದ ತಮಿಳುನಾಡಿನಲ್ಲಿ ಹಿಂಗಾರು ಮಳೆ ಧೋ ಎಂದು ಸುರಿಯುವ ಮುನ್ಸೂಚನೆಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ. ಅಲ್ಲಿ ಮಳೆಯಾದಾಗ ಆ ನೀರನ್ನು ವಾಪಸ್ ಪಂಪ್ ಮಾಡಿ ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಈಗಾಗಲೇ ದಾಖಲೆಯ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಹ ಹಾಹಾಕಾರ ಆರಂಭವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಕರ್ನಾಟಕ ಬಂದ್, ರೂಪ್ಸಾ ನೈತಿಕ ಬೆಂಬಲ, ಜೀ ಕನ್ನಡ ನ್ಯೂಸ್,

‘ಹೀಗಾಗಿ KRSನಿಂದ ನೀರು ಬಿಡಲು ಸಾಧ್ಯವೇ ಇಲ್ಲವೆಂದು, ಈ ಎಲ್ಲಾ ಅಂಶಗಳನ್ನು ಒಳಗೊಂಡ ಸಮರ್ಥ ವಾದವನ್ನು ರಾಜ್ಯ ಸರ್ಕಾರ ಮಂಡಿಸಿ, ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ್ದೇ ಬೇರೆ..!! ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿಲ್ಲ, ರಾಜ್ಯದ ಸಂಸದರು ಮಾತನಾಡುತ್ತಿಲ್ಲ ಎಂಬ ತಮ್ಮ ಟೂಲ್ ಕಿಟ್ ಅನ್ನು ಮಾತ್ರ ಸಿದ್ದರಾಮಯ್ಯರವರು ಚಾಚೂ ತಪ್ಪದೆ ಮುಂದುವರೆಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

‘ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮೊನ್ನೆ ತಮಿಳುನಾಡಿಗೆ 3000 ಕ್ಯೂಸೆಕ್ಸ್ ನೀರು ಹರಿಸಬೇಕು ಎಂಬ ಆದೇಶವನ್ನು ನೀಡಿದಾಗ ರಾಜ್ಯದ ಸಿಎಂ-ಡಿಸಿಎಂ ಅದನ್ನು ವಿರೋಧಿಸುವ ಬದಲು, ಸ್ವಾಗತಿಸುತ್ತಾರೆಂದರೆ ಕಾವೇರಿ ನೀರನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ಬದಲು, ತಮಿಳುನಾಡಿಗೆ ಹರಿಸುವುದೇ ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಗೆ ಅತ್ಯಂತ ಸಂತಸದ ವಿಷಯ ಎಂಬ ಅಸಲಿ ಸತ್ಯ ಅನಾವರಣವಾಗುತ್ತದೆ. ಕಾವೇರಿ ನೀರನ್ನು ಸ್ಟಾಲಿನ್‌ ನಾಡಿಗೆ ಹರಿಸದಿದ್ದರೆ, ಡಿಎಂಕೆ ತಮ್ಮ I.N.D.I. ಮೈತ್ರಿಕೂಟ ತೊರೆಯುತ್ತದೆ ಎಂಬ ಭಯ ಸಹ ಕೈ ನಾಯಕರಿಗೆ ಕಾಡಿರುವ ಸಾಧ್ಯತೆ ಹೆಚ್ಚು..!! ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸದಾ ಅನ್ಯಾಯವೆಸಗಿದೆ ಎಂದು ಹೇಳುವ ಮುನ್ನ ಸಿದ್ದರಾಮಯ್ಯರವರು ಒಮ್ಮೆ ಇತಿಹಾಸವನ್ನು ಅಧ್ಯಯನ ಮಾಡಬೇಕು’ ಎಂದು ಬಿಜೆಪಿ ಕುಟುಕಿದೆ.

‘2018ರಲ್ಲಿ ಕಾವೇರಿ ನದಿನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಸಿ, ಕರ್ನಾಟಕದ ಪಾಲಿಗೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಲಭಿಸುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ, ಕರ್ನಾಟಕದ ಹಿತ ಕಾಪಾಡಿದೆ ಎಂಬುದಕ್ಕೆ ಇದೇ ಪ್ರಮುಖ ಸಾಕ್ಷಿ. ಕಾವೇರಿ ವಿಚಾರದಲ್ಲಿ ಸದಾ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಒಂದು ಸವಾಲ್. ಮೇಕೆದಾಟು ಹೆಸರಿನಲ್ಲಿ ಈಗಾಗಲೇ ವಾಕಿಂಗ್ ಮಾಡಿ ಮೈಲೇಜು ಗಿಟ್ಟಿಸುವ ನಾಟಕವಾಡಿ ಮುಗಿಸಿದ್ದೀರಿ. ಇನ್ನೆರೆಡು ವಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ: ನಾಳೆ ಸಿಲಿಕಾನ್ ಸಿಟಿಯಲ್ಲಿ ಓಲಾ ಉಬರ್ ಓಡಾಟ ಇಲ್ಲ

‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಬರಲೆಂದು ಹಗಲು-ರಾತ್ರಿ ತನು-ಮನ-ಧನ ಅರ್ಪಿಸಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯರವರು ಮತ್ತು ಡಿ.ಕೆ.ಶಿವಕುಮಾರ್‌ರವರು, ಇನ್ನು 15 ದಿನದೊಳಗೆ ತಮಿಳುನಾಡು ಸರ್ಕಾರದ ವತಿಯಿಂದ ಮೇಕೆದಾಟು ಯೋಜನೆಗೆ ನಿರಪೇಕ್ಷಣಾ ಅರ್ಜಿಯನ್ನು ಸಲ್ಲಿಸಲು ಸ್ಟಾಲಿನ್‌ ಅವರ ಮನವೊಲಿಸಲಿ. ಈ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಇರುವ ದೊಡ್ಡ ಅಡೆತಡೆಯೊಂದನ್ನು ಇತ್ಯರ್ಥಗೊಳಿಸಲಿ. ಈ ಕೆಲಸ ಸಿದ್ದರಾಮಯ್ಯರವರು ಮತ್ತು ಡಿ.ಕೆ.ಶಿವಕುಮಾರ್‌ರವರಿಂದ ಮಾತ್ರ ಸಾಧ್ಯ. ಹೇಗಿದ್ದರೂ ಸದ್ಯ ಸಿದ್ದರಾಮಯ್ಯರವರು, ಡಿ.ಕೆ.ಶಿವಕುಮಾರ್‌ರವರು ಮತ್ತು ಸ್ಟಾಲಿನ್‌ರವರು ಒಂದೇ ಬಳ್ಳಿಯ ಹೂಗಳಂತೆ ಗಳಸ್ಯ-ಕಂಠಸ್ಯ ಸ್ನೇಹಿತರಾಗಿದ್ದಾರೆ. ಇವರ ಈ ಸ್ನೇಹ ಕೊಂಚವಾದರೂ ರಾಜ್ಯದ ಹಿತಕ್ಕೆ ಉಪಯೋಗವಾಗಲಿ. ನಾಡಿಗೆ ಒಳಿತಾಗುವ ಈ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೆ, ಖಂಡಿತವಾಗಿ ಬಿಜೆಪಿ ‌ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಟ್ವೀಟ್ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News