Teacher Recruitment Scam: ಮಮತಾ ಬ್ಯಾನರ್ಜಿ ಸಚಿವರ ಆಪ್ತನ ಮನೆ ಮೇಲೆ ಇಡಿ ದಾಳಿ, 20 ಕೋಟಿ ನಗದು ವಶ!

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿಯವರ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ಮೊತ್ತವು ಎಸ್‌ಎಸ್‌ಸಿ ಹಗರಣಕ್ಕೆ ಸಂಬಂಧಿಸಿದೆ ಎಂದು ಇಡಿ ಶಂಕಿಸಿದೆ.

Written by - Puttaraj K Alur | Last Updated : Jul 23, 2022, 07:13 AM IST
  • ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಇಡಿ ದಾಳಿ
  • ಬರೋಬ್ಬರಿ 20 ಕೋಟಿ ರೂ. ಮೌಲ್ಯದ ನಗದು ಪತ್ತೆ, ಅಪಾರ ದಾಖಲೆಗಳು ವಶ
  • ಪಾರ್ಥ ಚಟರ್ಜಿ ಅಲ್ಲದೆ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಮನೆ ಮೇಲೂ ದಾಳಿ
Teacher Recruitment Scam: ಮಮತಾ ಬ್ಯಾನರ್ಜಿ ಸಚಿವರ ಆಪ್ತನ ಮನೆ ಮೇಲೆ ಇಡಿ ದಾಳಿ, 20 ಕೋಟಿ ನಗದು ವಶ! title=
20 ಕೋಟಿ ರೂ. ಮೌಲ್ಯದ ನಗದು ಪತ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಸಂಪುಟದ ಸಚಿವ ಪಾರ್ಥ ಚಟರ್ಜಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ್ದು, ಬರೋಬ್ಬರಿ 20 ಕೋಟಿ ರೂ. ಮೌಲ್ಯದ ನಗದು ವಶಪಡಿಸಿಕೊಂಡಿದೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿಯವರ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ಮೊತ್ತವು ಎಸ್‌ಎಸ್‌ಸಿ ಹಗರಣಕ್ಕೆ ಸಂಬಂಧಿಸಿದೆ ಎಂದು ಇಡಿ ಶಂಕಿಸಿದೆ. ದಾಳಿ ವೇಳೆ 500 ಹಾಗೂ 2000 ರೂ. ಮುಖಬೆಲೆಯ ನೋಟುಗಳು ರಾಶಿಯೇ ಕಂಡುಬಂದಿದ್ದು, ನೋಟು ಎಣಿಕೆ ಯಂತ್ರದ ಮೂಲಕ ಈ ಮೊತ್ತವನ್ನು ಎಣಿಸಲಾಗಿದೆ. ತನಿಖಾ ತಂಡವು ಬ್ಯಾಂಕ್ ಅಧಿಕಾರಿಗಳ ಸಹಾಯ ತೆಗೆದುಕೊಂಡು ದೊಡ್ಡ ಮೊತ್ತದ ಹಣವನ್ನು ಲೆಕ್ಕ ಹಾಕಿದೆ.   

ಇದನ್ನೂ ಓದಿ: Presidential Election 2022 : ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಹೆಚ್ಚು 'ಕ್ರಾಸ್ ವೋಟಿಂಗ್' : ಧನ್ಯವಾದ ಎಂದ ಬಿಜೆಪಿ

ಬಂಗಾಳದ ಸಚಿವರ ಮೇಲೆ ಇಡಿ ದಾಳಿ

ದಾಳಿ ವೇಳೆ ಅರ್ಪಿತಾ ಮುಖರ್ಜಿ ಅವರ ಅಡಗುತಾಣದಿಂದ 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಉದ್ದೇಶ ಮತ್ತು ಬಳಕೆಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಇಡಿ ತಿಳಿಸಿದೆ. ಚಟರ್ಜಿ ಅವರಲ್ಲದೆ ಶಿಕ್ಷಣ ಖಾತೆ ರಾಜ್ಯ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಮತ್ತು ಇತರರ ಮನೆಗಳ ಮೇಲೂ ಇಡಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಸಚಿವರಾದ ಪಾರ್ಥ ಚಟರ್ಜಿ ಮತ್ತು ಪರೇಶ್ ಅಧಿಕಾರಿ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದೆ.

ಪಾರ್ಥ ಚಟರ್ಜಿ ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ(ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಿರುವ ಆರೋಪ ಕೇಳಿಬಂದಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಇದುವರೆಗೂ ನಡೆದ ದಾಳಿಯಲ್ಲಿ ಸಿಕ್ಕಿರುವ ಅತಿದೊಡ್ಡ ಮೊತ್ತ ಇದಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: DRDO Recruitment 2022 : ಡಿಆರ್‌ಡಿಒದಲ್ಲಿ 630 ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ನೋಡಿ 

ಬೆಳಿಗ್ಗೆ 8.30ರ ಸುಮಾರಿಗೆ ಕನಿಷ್ಠ ಏಳರಿಂದ ಎಂಟು ಇಡಿ ಅಧಿಕಾರಿಗಳು ಚಟರ್ಜಿಯವರ ನಿವಾಸಕ್ಕೆ ತಲುಪಿ, ರಾತ್ರಿ 11ರವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು ಎಂದು ಏಜೆನ್ಸಿಯ ಮೂಲಗಳು ತಿಳಿಸಿವೆ. ಈ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಹೊರಗಡೆ ಬೀಡುಬಿಟ್ಟಿದ್ದರು. ಏಜೆನ್ಸಿ ಅಧಿಕಾರಿಗಳ ಮತ್ತೊಂದು ತಂಡವು ಕೂಚ್ ಬೆಹಾರ್ ಜಿಲ್ಲೆಯ ಮೆಖಲಿಗಂಜ್‌ನಲ್ಲಿರುವ ಅಧಿಕಾರಿಯ ಮನೆಗೆ ತಲುಪಿ, ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ

ಏತನ್ಮಧ್ಯೆ, ಇಡಿ ದಾಳಿ ವಿಚಾರವಾಗಿ ಟಿಎಂಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಈ ದಾಳಿಯನ್ನು ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರವೆಂದು ಆರೋಪಿಸಿದೆ. ಇದು ಟಿಎಂಸಿ ನಾಯಕರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲವೆಂದು ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News